ಶುಕ್ರವಾರ, ಸೆಪ್ಟೆಂಬರ್ 2, 2022

#ಸುಭಾಷಿತಗಳೆಂಬವಿಸ್ಮಯ

#ಸುಭಾಷಿತಗಳೆಂಬವಿಸ್ಮಯ 

ಇಂದಿನ‌ ಸುಭಾಷಿತ

ಷಡ್ದೋಷಾಃ ಪುರುಷೇಣೇಹ ಹಾತವ್ಯಾ‌ ಭೂತಿಮಿಚ್ಛಿತಾ.
ನಿದ್ರಾ ತಂದ್ರಾ ಭಯಂ‌ ಕ್ರೋಧಃ ಆಲಸ್ಯಃ ದೀರ್ಘಸೂತ್ರತಾ.

ಷಡ್ವೈರಿಗಳ ಬಗ್ಗೆ ಕೇಳಿದ್ದೇವೆ. ಷಡ್ದೋಷ ಏನಿದು? ನಿದ್ದೆ, ಹುರುಪಿಲ್ಲದ ಸ್ಥಿತಿ, ಆಲಸ್ಯ, ಹೆದರಿಕೆ ಸಿಟ್ಟು, ಕೆಲಸಗಳನ್ನು ಮುಂದೂಡುತ್ತಾ ಇರುವುದು ಇವುಗಳು ಸಾಧಕನಿಗೆ ಎದುರಾಗುವ ಆರು ದೋಷಗಳು.

ಆಲಸ್ಯವಂತೂ ಎಲ್ಲ ಸಂದರ್ಭಗಳಲ್ಲೂ ವರ್ಜ್ಯವೇ. ದೀರ್ಘಸೂತ್ರತೆ ಹೆಚ್ಚಿನ ಸಂದರ್ಭಗಳಲ್ಲಿ‌ ದೋಷಗಳಂತೆ ಕಾಣುವುದು. ಆದರೂ ಕೆಲವೊಮ್ಮೆ ಕಷ್ಟಕರ ಸಂದರ್ಭದಲ್ಲಿ ನಿರ್ಣಯಾತ್ಮಕವಾಗಿ ಯಾವೆಡೆ ವಾಲಿದರೂ ನಷ್ಟವೇ ಆಗುವುದಾದರೆ ನಿರ್ಣಯಿಸದಿರುವುದೇ ಉತ್ತಮ ಎಂದು ಅನ್ನಿಸುವುದುಂಟು. ನಿರ್ಣಯಿಸದಿರುವುದೂ ಒಂದು ನಿರ್ಣಯವೇ ತಾನೆ?

ನಿದ್ದೆ ಸ್ವಭಾವತಃ ಶತ್ರುವಲ್ಲ. ಮಿತಿ ಮೀರಿದ ನಿದ್ದೆ ಬುದ್ಧಿಯ ಮೊನಚನ್ನು ಕಡಿಮೆ ಮಾಡಬಹುದು. ಇತರೇ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ನಿದ್ದೆಯಿಂದ ಏನು‌ ಅನಾಹುತವಾಗುವುದೆಂದು ಕುಂಭಕರ್ಣನಿಂದಲೂ, ನಿದ್ದೆಯಲ್ಲಿದ್ದವನನ್ನು ಎಬ್ಬಿಸಿದರೆ ಏನಾಗುವುದೆಂಬುದನ್ನು ಮುಚುಕುಂದ - ಕಾಲಯವನನ ಕತೆಯಿಂದಲೂ ಅರಿತಿದ್ದೇವೆ. ಆಮೆ ಮೊಲದ ಕತೆಯ ವಿಲನ್ ಈ ನಿದ್ದೆಯೇ. ಕಾರ್ಯತತ್ಪರರಾಗುವಾಗ ನಿದ್ದೆ ಬಂದರೆ ಗೆಲ್ಲುವವರೆಂದೇ‌ ಇರುವವರೂ ಸೋಲುತ್ತಾರೆ. 
ಭಯ ಮತ್ತು ಕ್ರೋಧಗಳ ಬಗ್ಗೆ ಹೇಳಿ ಪ್ರಯೋಜನವಿಲ್ಲ. ಭಯ ಕಾರ್ಯದಲ್ಲಿ ತೊಡಗುವರೇ ಸಮಸ್ಯೆಯಾದರೆ ಕ್ರೋಧ ಕೈಗೆ ಬಂದ ತುತ್ತನ್ನೂ ಇಲ್ಲವಾಗಿಸುತ್ತದೆ. ಇಲ್ಲಿ ಒಂದು ಸ್ವಾರಸ್ಯಕರವಾದ ಕತೆ ನೆನಪಾಗುತ್ತದೆ.

ಒಬ್ಬನಿಗೆ ತಪಸ್ಸಿಗೆ ಮೆಚ್ಚಿದ ದೇವರು ಮೂರು ಕಲ್ಲುಗಳನ್ನು ಕೊಟ್ಟನಂತೆ. ಪೂಜೆ ಮಾಡುವಾಗ ಬೇಕಾದುದನ್ನು ನೆನಪಿಸಿಕೊಂಡು ದೇವರಿಗೆ ಅರ್ಪಿಸಿದರೆ ಬೇಕಾದ ವಸ್ತು‌ಹೇರಳವಾಗಿ ಸಿಗುತ್ತದೆ ಎಂದು. ಅವನ ಹೆಂಡತಿ ಆಸೆ ಬುರುಕಿ. ಯಾವಾಗಲೂ‌ ಗಂಡನನ್ನು ಅದು ಕೊಡು, ಇದು ತಾ, ಓಲೆ ಬೇಕು ಎಂದೆಲ್ಲ ಪೀಡಿಸುತ್ತಿದ್ದಳು. ಅವನು ರೋಸಿ ಹೋಗಿಯೇ ದೇವರ ಮೊರೆ ಹೊಕ್ಕಿದ್ದು. 

ದೇವರ ಕೃಪೆ ಆದುದರಿಂದ ಇನ್ನಾದರೂ ಇವಳ ಪೀಡೆಯಿಲ್ಲದೇ ಹಾಯಾಗಿರಬಹುದೆಂದು ಕೊಂಡ.

ಪೂಜೆಗೆ ಕುಳಿತಿದ್ದಾನೆ. ಅಭಿಷೇಕ ಆಯಿತು ಆರತಿ‌ ಆಯಿತು. ಇನ್ನೇನು ದೇವರು ಕೊಟ್ಟ ಮೊದಲನೇ ಕಲ್ಲು ಅರ್ಪಿಸಬೇಕು; ಎಲ್ಲಿದ್ದಳೋ ಏನೋ ಬಿರ್ರನೇ ಬಂದು 'ಏನು ಬೇಡಬೇಕೆಂದಿದ್ದೀರಿ?'. ಮೊದಲೇ ಇವಳ ಬಗ್ಗೆ ಸಿಟ್ಟು; ಈಗ ನೆತ್ತಿಗೇ ಏರಿತು. ' ನಿನ್ನ ತಲೆ'  ಎಂದ. ಏನಾಶ್ಚರ್ಯ! ಮನೆ ತುಂಬಾ ಹೆಂಡತಿಯ ತಲೆಯಂತಹ ತಲೆಗಳು. ಸೂರಿನಲ್ಲಿ ನೇತಾಡುವ, ಹೆಂಡತಿಯ ಮೈಗೆ ಅಂಟಿಕೊಂಡ, ನೆಲದಲ್ಲಿ ಬಿದ್ದುಕೊಂಡ ತಲೆಗಳ ರಾಶಿ.

ಅವನಿಗೆ ತನ್ನ ತಪ್ಪಿನ ಅರಿವಾಯಿತು. ಸರಿ ಮಾಡಬೇಕಲ್ಲ? ಎರಡನೇ ಕಲ್ಲು ಅರ್ಪಿಸಿ ' ಹೆಂಡತಿಯ ತಲೆಗಳೆಲ್ಲಾ ಹೋಗಲಿ' ಎಂದ. 

ಬಂದ ತಲೆಗಳೇನೋ ಹೋದುವು. ಹೆಂಡತಿಯ ಇದ್ದ ತಲೆಯೂ ಮಾಯವಾಯಿತು. ಮೊದಲೇ ತಲೆಯಿಲ್ಲದ ಹೆಂಡತಿ. ಈಗ ತಲೆಯೂ ಹೋದರೆ ಇವಳ ಜತೆ ಸಂಸಾರ ಹೇಗೆ ಮಾಡುವುದು ಎನ್ನಿಸಿ ಮೂರನೇ ಕಲ್ಲು ಅರ್ಪಿಸಿ ' ಹೆಂಡತಿಯ ಮೊದಲಿದ್ದ ತಲೆ ಬರಲಿ' ಎಂದ. 

ಸಿಟ್ಟಿನ ಕಾರಣ, back to square one. ಎಂಬಂತಾಯಿತು. 

ಈ ಆರು ದೋಷಗಳನ್ನು ಗೆಲ್ಲದ ಹೊರತು ಆರು ವೈರಿಗಳನ್ನು ಗೆಲ್ಲಲಾಗದು. ಏನಂತೀರಿ!!

ಸುಬ್ರಹ್ಮಣ್ಯ ಬರ್ವೆ ಎಂ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶಿವಾಪರಾಧ ಕ್ಷಮಾಪಣ ಸ್ತೋತ್ರದ ಕನ್ನಡ ಅನುವಾದ

ಶ್ರೀ ಆದಿ ಶಂಕರಾಚಾರ್ಯರ ಶಿವಾಪರಾಧ ಕ್ಷಮಾಪಣ ಸ್ತೋತ್ರದ ಕನ್ನಡ ಅನುವಾದದ‌ಯತ್ನ. ತಪ್ಪುಗಳಿದ್ದರೆ ಕ್ಷಮಿಸಿ, ಹರಸಿ. ಶಿವ ಶಿವ ಶಿವ ಭೋ  ಅಣು ರೂಪದಿಂದಣುಗನಾಗಿ ಬಪ್ಪ ಮೊದಲ...