ಗುರುವಾರ, ಫೆಬ್ರವರಿ 27, 2025

ಶಿವಾಪರಾಧ ಕ್ಷಮಾಪಣ ಸ್ತೋತ್ರದ ಕನ್ನಡ ಅನುವಾದ

ಶ್ರೀ ಆದಿ ಶಂಕರಾಚಾರ್ಯರ ಶಿವಾಪರಾಧ ಕ್ಷಮಾಪಣ ಸ್ತೋತ್ರದ ಕನ್ನಡ ಅನುವಾದದ‌ಯತ್ನ.
ತಪ್ಪುಗಳಿದ್ದರೆ ಕ್ಷಮಿಸಿ, ಹರಸಿ.

ಶಿವ ಶಿವ ಶಿವ ಭೋ 

ಅಣು ರೂಪದಿಂದಣುಗನಾಗಿ ಬಪ್ಪ ಮೊದಲಲ್ಲಿ ಮಾಂಸ ಮುದ್ದೆ.
ಕುಣಿಯೋಲುದರದಿ ಮಲಮೂತ್ರ ಮಡುವ ನಡುವಲ್ಲಿ  ನಾನು ಇದ್ದೆ.
ಧಣಿ ಕ್ಷಮಿಸು ಕೊಳೆಯ ಕೂಪದಲ್ಲಲ್ಲಿ ನಿನ ನಾಮ‌ಮರೆತೆ ಇದ್ದೆ 
ಎಣೆಯಿರದ ಮಹಿಮೆಗಳನುಳ್ಳ ಶಿವನೆ ಲಯಗೊಳಿಸು ಪಾಪ ಮುದ್ದೇ.||೧||

ಅಣುಗನಿರೆ ನಾನು ಅಳು ಬುರುಕ ಶುಚಿಯ ನರಿಯದಿರುವಿರವಿನಲ್ಲಿ
ಸ್ತನಪಾನಕಾಗಿ ಚಡಪಡಿಸೆ ಕಾಲು ಕೈ ಬಡಿವ ಸ್ಥಿತಿಗಳಲ್ಲಿ 
ತನು ಜ್ವರಗಳಲ್ಲಿ ಉರಿ ಶೀತದಲ್ಲಿ ವಶನಿರಲು ನೆನೆಯಲಿಲ್ಲ.
ಎಣೆಯಿರದ ಮಹಿಮೆಗಳನುಳ್ಳ ಶಿವನೆ ಲಯಗೊಳಿಸುಪಾಪವೆಲ್ಲ..||೨||

ಕುಣಿದಿದ್ದೆ ಪ್ರಾಯ ಹುಚ್ಚೇಳುತೆರಗೆ ವಿಷಯಗಳ ವಿಷಮತೆಯಲೀ
ಧನಕನಕ ಸುಖದ ಕ್ಷರ ಭ್ರಮೆಗೆ ಬುದ್ಧಿ ಮಾರಿದೆನು ಮಾಯೆಯಲ್ಲೀ
ಮನದಲ್ಲಿ ಮೀಸೆ ಭುಜಬಲದ ಅಮಲು ಇರೆ ಶಿವನ ಚಿಂತೆಯೆಲ್ಲಿ?
ಎಣೆಯಿರದ ಮಹಿಮೆಗಳನುಳ್ಳ ಶಿವನೆ ಲಯಗೊಳಿಸು ಪಾಪವಲ್ಲೀ||೩||

ತನು ಬಡಕಲಾಗಿ ವಯ ಮೀರುತಿರಲು ಮತಿಗೆಲ್ಲಿ ಸಿದ್ಧ ಬುದ್ಧಿ??
ಕೊನೆಯಿರದ ರೋಗ ಪರಿಜನ ವಿಯೋಗದಲಿ ನಿಲದ ಶುದ್ಧ ಬುದ್ಧಿ.
ಮನೆ ಮಠಗಳೆಂಬ ಭ್ರಮೆ ಬಿಡದ ಮನದಿ ಶಿವನೆನಹು ಬರದ ಬುದ್ಧಿ
ಎಣೆಯಿರದ ಮಹಿಮೆಗಳನುಳ್ಳ ಶಿವನೆ ಶುಚಿಗೊಳಿಸು ನನ್ನ ಬುದ್ಧಿ.||೪||


ಘನ ವೇದ ಪಾಠ ಸ್ಮೃತಿ ಕಥಿತ ಮಾರ್ಗ ಬಲು ಕಠಿಣವನುಸರಿಸಲು.
ಮನವಿಹುದು ಗಮಿಸಲರಿಯದಿಹೆ ಮಾರ್ಗ ದ್ವಿಜಕುಲಜನೇ ನಿಜದೊಳು?
ಮನವಿಹುದು ಶ್ರವಣ ಮನನಕ್ಕೆ ನೆನಹು ಜೊತೆ ನೀಡದಂಥ ಮರುಳು.
ಎಣೆಯಿರದ ಮಹಿಮೆಗಳನುಳ್ಳ ಶಿವನೆ ಸರಿಪಡಿಸು ಅರಳು ಮರುಳು||೫||

ನನ ಜಳಕಕಾಗಿ ನಸುಕಿನಲಿ ಹೊತ್ತು ತರಲಿಲ್ಲ ಗಂಗೆಯನ್ನು
ನಿನ ಪೂಜೆಗಾಗಿ ಮೂದಳದ ಬಿಲ್ವದಳ ಕೊಯ್ಯಲಿಲ್ಲವಿನ್ನು
ಹೆಣೆದಿಲ್ಲ ಕೊಳದಿ ಬೆಳೆದಿರುವ ಕಮಲ ಹೂಗಳಲಿ ಮಾಲಿಕೆಯನು.
ಎಣೆಯಿರದ ಮಹಿಮೆಗಳನುಳ್ಳ ಶಿವನೆ ಎಂತಹುದು ಪೂಜೆಯಿನ್ನು.||೬||

ಕೆನೆ ಹಾಲು ಮೊಸರು ಸಿಹಿ ಜೇನು ತುಪ್ಪದಭಿಷೇಕ ಮಾಡಲಿಲ್ಲ
ಘನ ಚಂದನವನು ಕುಂಕುಮವ ಮತ್ತರಸಿನವನು ಪೂಸಲಿಲ್ಲ.
ನಿನ ಮುಂದೆ ದೀಪವಿರಿಸುತ್ತ ಭಕ್ಷ್ಯ ನೈವೇದ್ಯ ಮಾಡಲಿಲ್ಲ.
ಎಣೆಯಿರದ ಮಹಿಮೆಗಳನುಳ್ಳ ಶಿವನೆ ತಪ್ಪುಗಳ ಮನ್ನಿಸೆಲ್ಲ||೭||

ಮನದಲ್ಲಿ ನಿನ್ನ ನೆನೆದಿಲ್ಲ ವಿಪ್ರಗಣವನಾದರಿಸಲಿಲ್ಲ.
ನಿನ ಪ್ರೀತಿಗಾಗಿ ಚರು ಹವನದಲ್ಲಿ ಆಹುತಿಯ ನೀಯಲಿಲ್ಲ
ಮನೆಬಿಟ್ಟು ಗಂಗೆ ಜಲದಲ್ಲಿ ಮಿಂದು ಜಪತಪವ ಮಾಡಲಿಲ್ಲ
ಎಣೆಯಿರದ ಮಹಿಮೆಗಳನುಳ್ಳ ಶಿವನೆ ಮರೆವುಗಳ ಮನ್ನಿಸೆಲ್ಲ.||೮||

ನಿನ ಮಂತ್ರವನ್ನು ಕಮಲಾಸನದಲಿ  ಕೂತೇನು ಜಪಿಸಲಿಲ್ಲ.
ಮನ ಶಾಂತಿಯಲ್ಲಿ ನಿನ ದಿವ್ಯ ರೂಪ ಚಣಕಾಲ ಕಾಣಲಿಲ್ಲ.
ತನು ಮನವ ನಿನ್ನಲನುಸಂಧಿಸಿಲ್ಲ ಶಿವ ಭಾವ ಮೂಡಲಿಲ್ಲ
ಎಣೆಯಿರದ ಮಹಿಮೆಗಳನುಳ್ಳ ಶಿವನೆ ಅಪರಾಧ ಮರೆಸೊ ಎಲ್ಲ||೯||

ಗುಣರಹಿತ - ವಸನ ದಶ ದಿಕ್ಕಿನವನ ನಿಃಸಂಗ ಶಿವನ ಕುರಿತು
ನನ ನಾಸಿಕದೆಡೆ ಕಣ್ ದೃಷ್ಟಿಯಿಟ್ಟು ಬೇರೆಲ್ಲವನ್ನು ಬಿಸುಟು
ಮನದೆಲ್ಲ ಮಲವ ತೊಳೆದಿಡುತ ಹೃನ್ಮನದಿ ನಿನ್ನ ನೆನೆಯಲಿಲ್ಲ 
ಎಣೆಯಿರದ ಮಹಿಮೆಗಳನುಳ್ಳ ಶಿವನೆ ಅಪರಾಧ ಮನ್ನಿಸೆಲ್ಲ||೧೦||

ನಿನ ಶಿರದಿ ಶಶಿಯು ಕೊರಳಲ್ಲಿ ಸರ್ಪ ವಿಷಕಂಠ ಮದನಹರನೇ
ಜಿನುಗುತಿಹ ಗಂಗೆ ಗಜ ಚರ್ಮಧರನೆ ಮುಕ್ಕಣ್ಣ ಸಾಂಬ ಶಿವನೇ
ಜನಜಾಲಕೆಲ್ಲ‌ ನಿನ ನಾಮ ಮದ್ದು ಭವರೋಗ ವೈದ್ಯ ನೀನೇ
ಎಣೆಯಿರದ ಮಹಿಮೆಗಳನುಳ್ಳ ಶಿವನೆ ಮನ್ನಿಸಪ ರಾಧಗಳನೆ||೧೧||

ಧನವಾಹನಾದಿ‌ ಹಯ ಗಜಗಳಾದಿ ರಾಜ್ಯಾದಿ ಕೋಶದಿಂದ
ದನ ಕರುವು ಪುತ್ರ ಬಾಂಧವರ ಮಿತ್ರ ಸಂಪದ ಗಳಿರವಿನಿಂದ
ಚಣದಲ್ಲಿ ದೂರವಾಗ್ವಂಥ ಜೀವವೇನ್ ಪಡೆವು ದಿವುಗಳಿಂದ?
ಮುನಿಜನರು ಕಲಿಸಿರುವ ಶಿವನನಾಮವನು ಭಜಿಸು ಇಂದಿನಿಂದ||೧೨||

ದಿನದಿನವು ವಯಸ ಭಕ್ಷಿಪುದು ಸಮಯ ಮುಪ್ಪಡರಿ ಸವೆವ ದೇಹ
ದಿನ ತಿರುಗಿ ಬರದ ಇಹ ಲೋಕ ಯಾನಕಾಗಿನಿತು ಯಾಕೆ ಮೋಹ?
ಧನ ಹರಿವ ನೀರ ಮೇಲಿರುವ ಗುಳ್ಳೆ ಯಂತಲ್ತೆ ಯಾಕೆ ಮೋಹ ?
ಎಣೆಯಿರದ ಮಹಿಮೆಗಳನುಳ್ಳ ಶಿವನ ಮೇಲಿಡೈ ನಿನ್ನ ನೆನಹ.||೧೩||

ನನ ಕರವು ಚರಣ ನುಡಿ ಕಜ್ಹದಿಂದಲಾದಂಥ ತಪ್ಪುಗಳನು
ಕಣ್ ದಿಟ್ಟಿಯಿಟ್ಟ ಕಿವಿ ಕೇಳಿಕೊಂಡ ಮನ ನೆನೆದ ಪಾಪಗಳನು
ಸಮ ವಿಷಮಗಳನು ನೀನಳೆದುಕೊಂಡು ಪರಿಹರಿಸು ಪಾಪಗಳನು
ಎಣೆಯಿರದ ಮಹಿಮೆಗಳನುಳ್ಳ ಶಿವನ ಬಿಟ್ಟಾರು ದೇವರಿನ್ನು.||೧೪||

ಸುಬ್ರಹ್ಮಣ್ಯ ಬರ್ವೆ ಎಂ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶಿವಾಪರಾಧ ಕ್ಷಮಾಪಣ ಸ್ತೋತ್ರದ ಕನ್ನಡ ಅನುವಾದ

ಶ್ರೀ ಆದಿ ಶಂಕರಾಚಾರ್ಯರ ಶಿವಾಪರಾಧ ಕ್ಷಮಾಪಣ ಸ್ತೋತ್ರದ ಕನ್ನಡ ಅನುವಾದದ‌ಯತ್ನ. ತಪ್ಪುಗಳಿದ್ದರೆ ಕ್ಷಮಿಸಿ, ಹರಸಿ. ಶಿವ ಶಿವ ಶಿವ ಭೋ  ಅಣು ರೂಪದಿಂದಣುಗನಾಗಿ ಬಪ್ಪ ಮೊದಲ...