ಮಂಗಳವಾರ, ಆಗಸ್ಟ್ 16, 2022

ವೇಷ- ಲೇಖನ ಸರಣಿ ಭಾಗ 1

 ವೇಷ.

ನಿಜವಲ್ಲ, ಹೌದು ವೇಷವೇ. ರಾತ್ರಿಯಿಡಿ ಕುಪ್ಪಳಿಸಿ ತಕಧೀಂ ಎಂದು ಕುಣಿದು ಮಾತಾಡಿ, ಬೆಳಗಿನ ಜಾಮ ಬರುವಾಗ ಕಾಲುಗಳ ಗಂಟೆಲ್ಲಾ ನೋವು. ಆರಂಭದಲ್ಲಿದ್ದ ಲವಲವಿಕೆ ಗಂಟೆಗಳು ಕಳೆದಂತೇ ಕಡಿಮೆಯಾಗುತ್ತಾ ಹೋಗುತ್ತದೆ. ಬೆಳಗಿನ ಜಾಮ ಬಂದಾಗ 'ಒಮ್ಮೆ ಮುಗಿದರೆ ಸಾಕು' ಎಂಬ ವೈರಾಗ್ಯದ ಮನ ಎಲ್ಲಾ ಕಲಾವಿದರಿಗೆ. ಅದರೆ ಮರುದಿನ ಪುನಃ ಇಮ್ಮಡಿ ಆಸಕ್ತಿ. ಸ್ವಲ್ಪ ಅಮೃತಾಂಜನವೋ, ನೋವಿನ ಎಣ್ಣೆಯೋ ಹಚ್ಚಿದಾಗ ತುಸು ಆರಾಮ ಸಿಕ್ಕ ಭ್ರಮೆಯೋ, ಭಾವನೆಯೋ ಮೂಡುತ್ತದೆ.
ಚುಮುಚುಮು ಬೆಳಗಾಗುತ್ತಿರುವಂತೇ, ಒಬ್ಬೊಬ್ಬರೇ ವೇಷ ಕಳಚಿ ದೊಗಲೆ ಪಂಚೆಗಳನ್ನು ತಮ್ಮ ತಮ್ಮ‌ ಹೆಸರಿನ ಪೆಟ್ಟಿಗೆಗಳಲ್ಲಿ ತುಂಬಿ, ಬಣ್ಣವನ್ನು ತೆಗೆಯುತ್ತಾರೆ. ಆದರೂ ಕಿವಿಯ ಹತ್ತಿರ, ಹುಬ್ಬುಗಳಲ್ಲಿ ಸ್ವಲ್ಪ ಉಳಿದುಹೋಗುತ್ತದೆ. ನುರಿತ ಕಲಾವಿದರು ಬಣ್ಣದ ಲವ ಲೇಶವೂ ಉಳಿಯದಂತೆ ತೆಗೆಯುತ್ತಾರೆ. ಮೊನ್ನೆ ಮೊನ್ನೆ ಸೇರಿದ ಹುಡುಗರು ಅನುಭವವಿಲ್ಲದೆ, ಹೇಗೆ ತೆಗೆಯಬೇಕೆಂದು ತಿಳಿಯದೇ ಇಡೀ ಮುಖಕ್ಕೇ ಎಣ್ಣೆ ಹಚ್ಚಿ ಮುಖ‌ ಕಪ್ಪು ಮಾಡಿಕೊಳ್ಳುತ್ತಾರೆ.‌ ಮತ್ತೆ ಬಣ್ಣ ತೆಗೆಯಲು ಸೀಗೆ ಪುಡಿಯೋ ಶಾಂಪೂವೋ ಬೇಕಾಗುತ್ತದೆ.
ಬೇಸಿಗೆಯಲ್ಲಿ ಇನ್ನೂ ಕಷ್ಟ. ವೇಷ ತೆಗೆಯುವ ಮೊದಲೇ ಬಣ್ಣ ಕದಡಲು ಪ್ರಾರಂಭವಾಗುತ್ತದೆ. ಈ ವೇಷ ಗೀಷ ಬಿಟ್ಟು ಮನೆಯಲ್ಲಿ ಮುಸುಕು ಹಾಕಿ ಮಲಗಿಬಿಡಬೇಕು ಅಂತ ಅನ್ನಿಸುತ್ತದೆ. ಆದರೆ ಆಸಕ್ತಿ ಬಿಡಬೇಕಲ್ಲಾ!!
ಏಳು ಗಂಟೆಗೆ ಸಾಯಂಕಾಲವೇ ಗುಡುಗುಡುಗುಡು ಎಂದು ಜನರೇಟರ್ ಸ್ಟಾರ್ಟ್ ಮಾಡುತ್ತಾರೆ. ನಿಲ್ಲುವುದು ಬೆಳಿಗ್ಗೆಯೇ. ಕಲಾವಿದರಿಗೆ, ಪ್ರೇಕ್ಷಕರಿಗೆ ಹೇಗೂ ಇಲ್ಲವಲ್ಲ; ಅಕ್ಕಪಕ್ಕದವರಿಗೂ ನಿದ್ದೆ ಇಲ್ಲ. ಇದು ದಿನ ನಿತ್ಯದ ದೃಶ್ಯ.
ಮೊನ್ನೆ,
ಚೌಕಿ ಮನೆಯಲ್ಲಿ ಅಬ್ರತಾಳ ಬೀಳುತ್ತಿದ್ದಾಗ ಏನೋ ಗುಸುಗುಸು ಆರಂಭವಾಯಿತು. ಏನು ಎಂದು ಅಕ್ಕಪಕ್ಕದವರಿಗೆ ಗೊತ್ತಾಗಲಿಲ್ಲ. ಭಾಗವತರಿಗೆ, ಮತ್ತು ಮುಖ್ಯ ಸ್ತ್ರೀವೇಷದವರಿಗೆ ಮಾತ್ರ ಗೊತ್ತಾಯಿತು. ಭಾಗವತರ ಅಭಿಮಾನಿಗಳು ಯಾರೋ ನಾಲ್ಕು ಜನ ಅವರನ್ನು ಭೇಟಿಯಾಗಲು ಬಂದಿದ್ದರು. ಅವರನ್ನು ಈ ಪುಂಡುವೇಷದವರು ಇಬ್ಬರು ಚೌಕಿಯ ಬಾಗಿಲಲ್ಲೇ ತಡೆದರು.
ಬಾಗಿಲು ಅಂದರೆ ಮರದ್ದೇನೂ ಅಲ್ಲ. ರಂಗದ ಮೇಲೆ ಸ್ವಲ್ಪ ಜಾಗದಲ್ಲೇ ಸರೋವರ, ಅರಮನೆ ಎಲ್ಲಾ ಬರುವಂತೆಯೇ ಕಾಲ್ಪನಿಕ. ಒಂದು ಪರದೆ. ಅದನ್ನು ದಾಟಿ ಬರಬಾರದೆಂಬ ನಿಯಮ ಗೊತ್ತಿದ್ದರೆ ಅಷ್ಟೇ ಸಾಕಾಗುತ್ತದೆ. ಅದೂ ಬೇಡ! ಒಂದು ಗೆರೆಯೂ ಸಾಕಾಗುತ್ತದೆ.
ಈ ಪುಂಡು ವೇಷದವರಿಗೆ ತಮ್ಮನ್ನು ಬಿಟ್ಟರೆ ಈ ಮೇಳಕ್ಕೆ ಗತಿಯಿಲ್ಲ ಎಂಬ ಜಂಭ. ತೀವ್ರ ಗತಿಯ ಪದ್ಯಗಳಿಗೆ ಸ್ಟೇಜ್ ಹುಡಿ ಮಾಡುವಂತಹ ಪದ ಸಂಚಾರ ಮಾಡಿ ಪ್ರೇಕ್ಷಕರನ್ನು ಹುಚ್ಚುಗಟ್ಟಿಸುವ ಬಿಸಿ ರಕ್ತ. ಸರಿ… ತಡೆದರು.
"ನಾವೇನೂ ನಿಮ್ಮ ಭಾಗವತರನ್ನು ಕರಕೊಂಡು ಹೋಗಲೋ, ಮರುಳು ಮಾಡಲೋ ಬರಲಿಲ್ಲ. ಅವರ ಹತ್ರ ಎರಡು ನಿಮಿಷ ಮಾತಾಡುವ ಅವಕಾಶ ಸಾಕು''
ಇವರ ಧಿಮಾಕು ನೋಡಿ!
"ಭಾಗವತರ ಹತ್ತಿರ ಏನು ಹೇಳಬೇಕೋ ಅದನ್ನು ನಮ್ಮಲ್ಲೇ ಹೇಳಿ, ಆಮೇಲೆ ನಾವೇ ತಲುಪಿಸ್ತೇವೆ, ಪುರ್ಸೋತ್ತು ಆದಾಗ" ಅಂತ ಗದರಿ ಅವರನ್ನು ಅತ್ತ ಕಳಿಸಿದರು.
ಆ ಮೇಲೆ ಏನಾಯಿತೋ ಏನೋ! ಮಾರನೇ ದಿನ ಈ ಪುಂಡುವೇಷದ ಪುಂಡರಿಗೆ ಮೇಳದಲ್ಲಿ ಅವಕಾಶ ಇಲ್ಲ ಅಂತ ಭಾಗವತರೇ ತಡೆದರು.
"ನಿಮಗೆ ಇನ್ನು ಮೂರು ವರ್ಷ ನಮ್ಮಲ್ಲಿ ಅವಕಾಶ ಇಲ್ಲ. ಅಭಿಮಾನಿಗಳ ಬಗ್ಗೆ ತಾತ್ಸಾರ ಮಾಡಿದ್ರಲ್ಲ! ನಿಜವಾಗಿ ಈ ಮೇಳ ನಿಮ್ಮಿಂದ ನಡೆಯುವುದಲ್ಲ, ಅದು ನಡೆಯುವುದು ಅಭಿಮಾನಿಗಳಿಂದ. ಮೂರು ವರ್ಷ ಹೋಗಿ ಕಷ್ಟ ಏನು‌ ಅಂತ ತಿಳಿದು ಬನ್ನಿ'' ಅಂತ ಕಳಿಸಿದರು.‌
ಈ ಪುಂಡುವೇಷದವರಿಗೆ ನಮ್ಮ ವೇಷ ಮಾತ್ರ ಪುಂಡು, ಆದರೆ ನಾವೂ ಪುಂಡರಲ್ಲ, ಅನ್ನುವ ಅರಿವು ಮರೆತಾಗ ಪುಂಡತನ ವೇಷ ಕಳಚಿದಾಗಲೂ ಉಳಿದು ಹೋಗುತ್ತದೆ. ಅದು ಹಾಗೆ ಉಳಿಯದ ಸ್ಥಿತಿ‌ ಬರುವ ತನಕ ವೇಷ ಮಾಡುತ್ತಲೇ‌ ಇರಬೇಕು.
ಇವರ ಪುಂಡು ವೇಷವೇನೂ ಮಹಾ ಪರಬ್ರಹ್ಮವಲ್ಲ. ಎರಡೆರಡು ಪದ್ಯ, ಅದಕ್ಕೇ ಸಿಕ್ಕಾಪಟ್ಟೆ ಕುಣಿದು ಒಂದೆರಡು ಬಾರಿ ಪ್ರವೇಶ - ನಿರ್ಗಮನ ಮಾಡಿದರೆ ಮುಗಿಯಿತು. ಮತ್ತೆ ಇಡೀರಾತ್ರೆ ಮುಸುಕು ಹಾಕಿ ಮಲಗುವುದಷ್ಟೇ.
ಈ ಮೇಳ ಬಿಡಿಸಿದರು. ಇನ್ನು ನೋಡಿ ಇವರ ಕಷ್ಟ. ಇಡಿ, ಇಡೀ ರಾತ್ರೆಯ ವೇಷಗಳು. ಮಧ್ಯೆ ನೀರು ಕುಡಿಯುವುದೂ ಯೋಚಿಸಿಯೇ ಕುಡಿಯಬೇಕು.
****
ನಮ್ಮ ವೈಕುಂಠವೂ ಹೀಗೇ ಅಲ್ವಾ?? ಇಲ್ಲಿ‌ ಭಾಗವತರದ್ದೇ ಕಾರ್ಬಾರು. ಅವರೇ ಇಡೀ ನಾಟಕದ ನಿರ್ದೇಶಕರು. ಭಗವಂತ ಅಂತಲೂ ಕೆಲವರು ತಮಾಷೆ ಮಾಡ್ತಾರೆ. ಅವರ ಜತೆ ಯಾವತ್ತೂ ಕುಳಿತು ಕಾಲೊತ್ತುವ ಕೆಲಸ ಮುಖ್ಯ ಸ್ತ್ರೀ ಪಾತ್ರಕ್ಕೆ. ಖಜಾನೆಯ ಬೀಗದ ಕೈ ಅವಳ ಹತ್ತಿರವೇ ಇರುವುದು. ಇಲ್ಲಿ ಜಾಸ್ತಿ ಜಾಗ ಇಲ್ಲ. ಇಬ್ಬರು ಕೂರುವಷ್ಟು ಮತ್ತೆ ಸ್ವಲ್ಪ‌ಜನ ನಿಲ್ಲುವಷ್ಟು ಅಷ್ಟೇ. ಹೆಚ್ಚು ಮಂದಿ ಬಂದರೆ ಇರುವವರು‌ ಹೊರಗೆ ನಡೆಯಬೇಕು. ಆದರೂ ಇಲ್ಲಿಗೇ ಬರಬೇಕು ಎಂಬುದೇ ಎಲ್ಲರ ಆಸೆ.
ಕೂತುಕೊಳ್ಳಲು ಮೆದು ಮೆದು ಹಾಸಿಗೆ. ಒಮ್ಮೊಮ್ಮೆ ಮೆದು ಹಾಸಿಗೆಯೂ ಮುಳ್ಳಾಗಿ ಚುಚ್ಚುತ್ತದಂತೆ. ಅದಕ್ಕೇ ಅದನ್ನು ಹಾವಿನ ಹಾಸಿಗೆ ಅಂತ ಹೇಳೋದು. ಅದು ಬಹುಷಃ ಹೊರಗಿನಿಂದ ಬರುವವರ ಕಾಲಿಗೆ ಅಂಟಿಕೊಂಡ ಸಣ್ಣ ಕಲ್ಲು ಮಣ್ಣು ಕೆಸರುಗಳದ್ದು ಇರಬೇಕು. ಹಾಗೆಂದು ಬರುವವರು ಕಾಲು ತೊಳೆದೇ ಒಳಗೆ ಬರಬೇಕೆಂಬ ನಿಯಮವೂ ಇದೆ. ಅದಕ್ಕೆ ನಲ್ಲಿ ನೀರಲ್ಲ. ಇಡೀ ಊರು ಮುಳುಗಿಸುವಷ್ಟು ನೀರು ತುಂಬಿ ತುಳುಕಾಡುತ್ತಾ ಇರುತ್ತದೆ. ಈ ಕಲ್ಲು ಮಣ್ಣಗಳು ಅಂದೆನಲ್ಲ! ಅದು ನೀರಿನ ಜತೆ ಸೇರಿ ಸೇರಿ ನೀರೇ ಉಪ್ಪಾಗಿ ಹೋಗಿದೆ. ಆದರೆ ಆ ರುಚಿ, ಕೊಳೆ ಕಾಲು ಹಿಡ್ಕೊಂಡು ಬಂದವರಿಗೆ ಮಾತ್ರ. ಹೊರಗೆ ಸುತ್ತಾಡಲು ಹೋದಾಗ ಅಲ್ಲಿನ ಮಣ್ಣು, ಕೆಸರು, ಇತ್ಯಾದಿ ತಾಗಿಸಿಕೊಳ್ಳದೇ ಬರುವುದನ್ನು ಅರಿತವರಿಗೆ ಈ ನೀರಿಗೆ ಹಾಲಿನ ರುಚಿ. ಆ ಕಲಿಕೆಯೇ‌ ಇಲ್ಲಿಗೆ ಬಂದು ಯಾವಾಗಲೂ ಇರಬೇಕೆನ್ನಿಸುವವರಿಗೆ ಅರ್ಹತೆ.
ಇಲ್ಲಿಯವರೆಗೆ ಬಂದ ಖುಷಿಗೆ ಕೆಲವರು ಕಾಲು ತೊಳೆಯುವ ಶಾಸ್ತ್ರ ಮಾತ್ರ ಮಾಡುತ್ತಾರೆ. ಅವರಲ್ಲಿ ಕೊಳೆಯ ಶೇಷ ಉಳಿಯುತ್ತದೆ. ಅಂತಹ ಅರ್ಧಂಬರ್ಧ ಕೆಲಸ‌ ಮಾಡುವವರು ಅವರು ಪುನಃ ಸುತ್ತಾಡಿ ಬರಬೇಕು. ಕಾಲು ತೊಳೆಯುವುದೂ ಒಂದು ಕಲೆ. ಕಾಲಿಗೆ ಕೊಳೆ ತಾಗಿಸಿಕೊಳ್ಳದಂತೇ ನಡೆಯುವುದನ್ನು ಕಲಿಯುವುದು ಇದೆಯಲ್ಲ ಅದು ವಿಶೇಷ.
ನೀರು ಹಾಲಾಗಿ, ಹಾಲು ನೀರಾಗಿ, ಯಾರಿಗೆ‌ ರುಚಿ ನೀಡುತ್ತದೋ ಅವರ ಹುಡುಕಾಟದಲ್ಲಿ‌ ಭಗವಂತ ತನ್ನ ಸಮಯ ಕಳೆಯುತ್ತಾನೆ. ಹಾಗೆ ಅನ್ನಿಸುವವರೆಗೆ ಇಲ್ಲಿಗೆ ಹೋಗಿ ಬಂದು ಮಾಡುವುದು ಅನಿವಾರ್ಯ.
ಈಗ ಆ ಎರಡು ಪುಂಡುವೇಷದವರನ್ನು ಇಲ್ಲಿಗೆ ತಂದು ನೋಡಿ! ಅವರು ಇಲ್ಲಿಗೆ ಬರುವಾಗ ಒಳಗಿನ ಚಂದ ನೋಡುತ್ತಾ ಬಂದವರು. ಆ ಉತ್ಸುಕತೆಗೆ ಕಾಲಿಗೆ ಚೂರು ಅಂಟಿದ ಕೊಳೆ ಹಾಗೇ ಉಳಿದು ಹೋಯಿತು. ಹೊರಗಿನ ಕೊಳೆ ಇಲ್ಲಿಗೆ ಹಿಡ್ಕೊಂಡು ಬಂದರೆ ತಲೆಗೇ ಹತ್ತುವುದು. ಈಗ ನೋಡಿ ಏನಾಯಿತು? ಮೂರು ಸಾರಿ ಇಲ್ಲಿಗೆ ಹೋಗಿ ಬಂದು ಮಾಡಬೇಕು. ಕೊನೆಯ ಬಾರಿ ಕೊಳೆ ಪೂರ್ತಿ ಕಳೆದರೆ ಪರವಾಗಿಲ್ಲ. ಇಲ್ಲದಿದ್ದರೆ ಮತ್ತೆ ಇಲ್ಲಿಂದ ಬಹಿಷ್ಕಾರ.
ನೀವೂ ಈ ಬಗ್ಗೆ ಯೋಚಿಸಿ.
ಮತ್ತೆ ಮಾತಾಡೋಣ.
ನಮಸ್ಕಾರ.
ಸುಬ್ರಹ್ಮಣ್ಯ ಬರ್ವೆ ಎಂ.
.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶಿವಾಪರಾಧ ಕ್ಷಮಾಪಣ ಸ್ತೋತ್ರದ ಕನ್ನಡ ಅನುವಾದ

ಶ್ರೀ ಆದಿ ಶಂಕರಾಚಾರ್ಯರ ಶಿವಾಪರಾಧ ಕ್ಷಮಾಪಣ ಸ್ತೋತ್ರದ ಕನ್ನಡ ಅನುವಾದದ‌ಯತ್ನ. ತಪ್ಪುಗಳಿದ್ದರೆ ಕ್ಷಮಿಸಿ, ಹರಸಿ. ಶಿವ ಶಿವ ಶಿವ ಭೋ  ಅಣು ರೂಪದಿಂದಣುಗನಾಗಿ ಬಪ್ಪ ಮೊದಲ...